ಎಲ್ಲೋ ಹುಡುಕಿದೆ
ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ
…… ಇದು ಕವಿವಾಣಿ. ಇಂದಿನ ಅನುದಿನದ ನಡವಳಿಕೆಗಳು ಆಗುಹೋಗುಗಳನ್ನೊಮ್ಮೆ ಅವಲೋಕಿಸಿದರೆ ಈ ಮಾತು ಅಕ್ಷರಶಃ
ಸತ್ಯ ಅನಿಸದಿರದು……. ವೈಜ್ನಾನಿಕಯುಗ ಇದು…. ಕಾಲ ಬದಲಾಗಿದೆ…….. ಮೊದಲಿನಂತಿಲ್ಲ ಎಂದು ಗೋಳಿಡುತ್ತಿರುವ
ಅಜ್ಜಿ ತಾತ ಕೊಡುವ ಪ್ರೀತಿ, ಅಪ್ಪ ಅಮ್ಮ ಕೊಡುತ್ತಿದ್ದ ಪ್ರೀತಿ, ಅಕ್ಕ ತಂಗಿಯರ ಪ್ರೀತಿ, ಅಣ್ಣ ತಮ್ಮಂದಿರ
ಪ್ರೀತಿ, ಬಹುಶಃ ದೀಪ ಹಿಡಿದು ಹುಡುಕಿದರೂ ಸಿಗದ ಕಾಲಘಟ್ಟದಲ್ಲಿ ನಾವಿದ್ದೇವೆ.
ಕಾಲ ಕೆಟ್ಟಿದೆ ಎಂದು
ಬೊಬ್ಬೆ ಹೊಡೆಯುತ್ತೇವೆ, ಕೆಟ್ಟದ್ದು ಕಾಲವೇ? ಇಲ್ಲ ನಾವೇ? ಯೋಚಿಸಬೇಕಾಗಿದೆ!..........ಅಪ್ಪ ಮಗಳ
ಸಂಬಂಧ, ಅಣ್ಣ ತಂಗಿಯ ಸಂಬಂಧಗಳು ಎತ್ತ ಸಾಗುತ್ತಲಿವೆ………. ಕಾಮುಕರ ಕಣ್ಣಿಗೆ ಪುಟ್ಟ ಮಗುವಿನ ಮುಗ್ಧತೆಯೂ
ಕಾಣದಾಗಿದೆ ಎಂದ ಮೇಲೆ ನಮ್ಮ ಸಮಾಜದ ಭೀಕರತೆಯನ್ನು ಅಳೆಯಲು ಬೇರೆ ಮಾಪನದ ಅಗತ್ಯ ಇರಲಿಕ್ಕಿಲ್ಲ ಅಲ್ಲವೆ?
ರಾಮಾಯಣದ ರಾಮ ಸೀತೆಯರ ಆದರ್ಶ ಕಂಡು ಓದಿ ಕಲಿತು ತಿಳಿದ ದೇಶವೆ ಇದು? ಹತ್ತು ಹಲವು ಸಾಧು ಸಂತರು ಹುಟ್ಟಿ
ಬಾಳಿದ ನಾಡೆ ಇದು? ಕಥೆಗಳಲ್ಲಿ ಕೇಳಿದ, ಪುರಾಣಗಳಲ್ಲಿ ಓದಿದ ಸಾಮಾಜಿಕ ನೀತಿ ನಿಯಮಗಳು, ರೀತಿರಿವಾಜುಗಳು,
ಮೌಲ್ಯಗಳು ಬಿರುಗಾಳಿಗೆ ಸಿಲುಕಿ ದಿಕ್ಕೆಟ್ಟಿವೆಯೆ? ತ್ಸುನಾಮಿಗೆ ಸಿಲುಕಿ ಕೊಚ್ಚಿ ಹೋಗಿರಬಹುದೆ?
ಅಥವ ಪ್ರಳಯ ಎಂದರೆ ಇದುವೇ?