Saturday, August 18, 2012


ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ



ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೆ............  ನಿನ್ನ ಪ್ರೇಮದಿ ಬೆಳೆದು ಜೀವವು ಮಾನ್ಯವಾದುದು ತಾಯಿಯೆ............

ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇಂದು ನಮಗೆ ಸಾಧ್ಯವಾಗುತ್ತಿದೆಯೆಂದಾದರೆ ಅದರ ಹಿಂದೆ ಭರತಮಾತೆಯ ದಾಸ್ಯದ ಬಿಡುಗಡೆಗಾಗಿ ಹೋರಾಡಿದ ಅದೆಷ್ಟೋ ಮಂದಿಯ ಶ್ರಮವಿದೆ. ಅವರು ಬಿತ್ತಿದ ಬೀಜ ಗಿಡವಾಗಿ, ಆ ಗಿಡ ಮರವಾಗಿ, ಇಂದು ನೀಡುತ್ತಿರುವ ಫಲದ ಸವಿಯನ್ನು ನಾವಿಂದು ಸವಿಯುತ್ತಿದ್ದೇವೆ. ಆದರೆ ಆ ಮರವನ್ನು ನೀರುಣಿಸಿ ಪೋಷಿಸಿ ಬೆಳೆಸಿ ಉಳಿಸುವಲ್ಲಿ ನಮ್ಮ ಕೊಡುಗೆ ಎಷ್ಟರಮಟ್ಟಿಗಿದೆ ಎಂಬುದನ್ನು ಯೋಚಿಸಲೇಬೇಕಾಗಿದೆ.

  ನಮಗಿಂದು ೬೫ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ನಮ್ಮ ದೃಷ್ಟಿಯನ್ನೊಮ್ಮೆ ಕಳೆದು ಹೋದ ದಿನಗಳ ಪುಟಗಳೆಡೆಗೆ ಹರಿಸೋಣ............ ಆ ಸ್ವಾತಂತ್ರ್ಯ ಯೋಧರಿಗೆ ನಮಿಸೋಣ.............

( ಮಾ ತುಜೆ ಸಲಾಂ…………………)
ಉತ್ತರದ ಹಿಮಾಲಯದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅರುಣಾಚಲದವರಗೆ ವಿಸ್ತಾರವಾಗಿ ಪಸರಿಸಿರುವ ಭರತ ಮಾತೆಯ ಅಂತರಾಳದಲ್ಲಿ ಅಡಗಿರುವ ಮಹಾಸಂಪತ್ತಿನ ಬೆಲೆಯನ್ನು ನಮ್ಮಿಂದ ಮೊದಲೇ ತಿಳಿದುಕೊಂಡಿದ್ದ ಪಾಶ್ಚಿಮಾತ್ಯರು ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ಭಾರತದೆಡೆಗೆ ಪಾದಬೆಳೆಸಿದರು. ಬಂದವರೇ ನಮ್ಮಲ್ಲಿರುವ ಲೋಪದೋಷಗಳನ್ನೇ ಬಂಡವಾಳವನ್ನಾಗಿಸಿಕೊಂಡು ಇಡೀ ಭಾರತವನ್ನೇ ತಮ್ಮದಾಗಿಸಿಕೊಳ್ಳ ಹೊರಟರು. ಭಾರತಾಂಬೆಯ ಮುಂದೆ ಆ ಖಾಲದಲ್ಲಿದ್ದ ಸವಾಲುಗಳು ಒಂದಲ್ಲ ಎರಡಲ್ಲ ಹತ್ತು ಹಲವು............................

              ಉಭಯ ಸಂಕಟದೊಳಗೆ ತೊಳಲಾಡುತ್ತಿದ್ದ ಮಹಾತಾಯಿ ಭರತಮಾತೆಯನ್ನು ರಕ್ಷಿಸಬೇಕಾದ ಆಕೆಯ ಮಾನ ಪ್ರಾಣಗಳೆರಡನ್ನೂ ಉಳಿಸಬೇಕಾದ ಅನಿವಾರ್ಯತೆ ತಲೆದೋರಿತು. ಬಡವ ಬಲ್ಲಿದ ಮೇಲು ಕೀಳು, ಸ್ಪ್ರಷ್ಯ ಅಸ್ಪ್ರಷ್ಯ, ಮೊದಲಾದ ಹತ್ತು ಹಲವು ಸಮಸ್ಯೆಗಳೊಂದಿಗೆ ಮೂಲಭೂತ ಅಗತ್ಯವನ್ನು ಪೋರೈಸುವುದೂ ಕಷ್ಟ ಎಂಬ ಸ್ಥಿತಿ ನಮ್ಮ ಪಾಲಿನದ್ದಾಗಿತ್ತು...... ಇವೆಲ್ಲವುಗಳನ್ನು ನಮ್ಮ ಮನಸ್ಸಿನಲ್ಲಿಟ್ಟುಕೊಂಡು ಪ್ರತ್ಯಕ್ಷವಾಗಿ ಬ್ರಿಟಿಷರ ಪರೋಕ್ಷವಾಗಿ ಈ ಎಲ್ಲಾ ಎಡರುತೊಡರುಗಳ ವಿರುದ್ಧದ ಹೋರಾಟವೇ ಸ್ವಾತಂತ್ರ್ಯ ಸಂಗ್ರಾಮವಾಯಿತು...............
ಭೂತಕಾಲದ ಕುರಿತು ಅರಿವಿರದೆ ವರ್ತಮಾನವನ್ನು ಲೆಕ್ಕಿಸದೆ ಮುಂದೆ ಬರುವ ಭವಿಷ್ಯದ ಕುರಿತು ಚಿಂತನೆಯಲ್ಲಿ ತೊಡಗಿದರೇನು ಫಲ.............. ನಮ್ಮ ಮಾನ ಪ್ರಾಣಗಳ ರಕ್ಷಣೆ ನಮ್ಮ ಹೊಣೆ ಎಂದರಿತು ೧೮೫೭ರಲ್ಲಿ ಬ್ರಿಟಿಷರ ಅಟ್ಟಹಾಸವನ್ನು ಹತ್ತಿಕ್ಕಲು ನಡೆದ ಮೊದಲ ಪ್ರಯತ್ನದ ಕಿಡಿ ಹೊತ್ತಿಸಿದವರಲ್ಲಿ ಒಬ್ಬ ಮಹಿಳೆ ಪ್ರಮುಖಳು. ನಂಬುವುದಕ್ಕೆ ಅಸಾಧ್ಯವಾದರೂ ನಂಬಲೇಬೇಕಾದ ಸತ್ಯವಿದು. ಬಿಟ್ಟುಬಿಡು ರಾಜ್ಯವ ಎಂದವರಿಗೆ ತಾಕತ್ತಿದ್ದರೆ ಕಾದಾಡಿ ಪಡೆ ರಾಜ್ಯವ ಎಂದು ದಿಟ್ಟತನದಿಂದ ಸವಾಲೆಸೆದ ವೀರವನಿತೆ...........ಬ್ರಿಟಿಷರು ಬಿಚ್ಚಹೊರಟ ಬಾಲಕ್ಕೆ ಕಿಚ್ಚುಹಚ್ಚಿದ ಆ ಇಪ್ಪತ್ತೆರಡರ ದಿಟ್ಟಹೆಣ್ಣೇ ಝಾನ್ಸೀರಾಣಿ ಲಕ್ಷ್ಮೀ ಬಾಯಿ.......

ಮೈ ಆಜಾದ್ ಹೂಂ.... ಆಜಾದ್ ಹೀ ರಹೂಂಗಾ.......... ಎಂದು ಘೋಷಿಸಿದ ಚಂದ್ರಶೇಖರ ಆಜಾದ್, ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬುದಾಗಿ ಸಾರಿ ಹೇಳಿದ ಬಾಲಗಂಗಧರ ತಿಲಕ್, ಹೋರಾಡಿ ಜೀವತೆತ್ತ ಭಗತ್ ಸಿಂಗ್, ಸಾವರ್ಕರ್, ಸಂಗೊಳ್ಳಿ ರಾಯಣ್ಣ, ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ ನಿಲ್ಲದಿರಿ ಎಂದು ಸಾರಿ ಯುವಕರನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದ, ಅಹಿಂಸೆಯಿಂದಲೂ ಗೆಲುವು ಸಾಧ್ಯ ಇದೆ ಎಂದ ಮಹಾತ್ಮಾಗಾಂಧಿ ಹೀಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿದವರು ಒಬ್ಬರಲ್ಲ, ಇಬ್ಬರಲ್ಲ, ಹಲವಾರು ಮಂದಿ................

ಇವರೆಲ್ಲಾ ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಇಂದಿಗೂ ನಮ್ಮೆದುರಿಗಿದೆ. ಹಾಲಾಹಲವ ಕುಡಿದು ಅಮೃತದ ಸವಿಯನ್ನು ಉಣಬಡಿಸಿದ ವೀರಜನರ ಬದುಕಿನ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಇವೆಲ್ಲವನ್ನು ಅರಿತು ಇಂದು ನಾವು ವಿದ್ಯಾವಂತರಾಗಿದ್ದೂ ನಮ್ಮದಲ್ಲ ಎಂಬಂತೆ, ನೋಡಿಯೂ ನೋಡದಂತೆ, ಎಚ್ಚರದಲ್ಲಿದ್ದೂ ನಿದ್ರಿಸಿದಂತೆ, ಕಣ್ಣಿದ್ದೂ ಕುರುಡರಂತೆ ನಟಿಸುತ್ತಿದ್ದೇವೆ ಎನ್ನುವ ಸ್ಂಗತಿ ನಿಷ್ಠುರ ಸತ್ಯ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ............ ಎಂದ ಮಾತು ಇಂದಿಗೂ ಜಗದ ತುಂಬೆಲ್ಲಾ ಅನುರಣಿಸುತ್ತಿದೆಯಾದರೂ ಯಾರಕಿವಿಗೂ ಇದು ಕೇಳಿಸುತ್ತಿಲ್ಲವೇ?  ಏಳಿ ಎದ್ದೇಳಿ ಗುರಿಮುಟ್ಟುವವರೆಗೆ ನಿಲ್ಲದಿರಿ ನಿಲ್ಲದಿರಿ ಎಂದ ವಿವೆಕಾನಂದರ ಮಾತನ್ನು ನಾವು ಮರೆತಿದ್ದೇವೆಯೆ?


ಸ್ವಾತಂತ್ರ್ಯ ಬಂದಿದೆ ಎಂದಾಗ ಆ ದಿನಗಳಲ್ಲಿ  ಆಚರಣೆಯ ಕಲ್ಪನೆಗಿಂತ ಮುಂದೆ ಉತ್ತಮ ರಾಷ್ಟ್ರ ಕಟ್ಟುವ ಕಲ್ಪನೆ ಮಹತ್ವದ್ದಾಗಿತ್ತು....... ಆದರೆ ಇಂದಿನ ಸ್ವತಂತ್ರ್ಯ ದಿನಾಚರಣೆ ಆಗಸ್ಟ್ ೧೫ ಕ್ಕೆ ಮಾತ್ರ ಸೀಮಿತವಾಗಿದೆಯೇ? ಇದು ಹೊಸ ಬಟ್ಟೆ ತೊಟ್ಟು ರಾಷ್ಟ್ರ ಧ್ವಜಕ್ಕೆ ವಂದಿಸಿ ಸಿಹಿತಿಂಡಿ ತಿಂದು ಸಂಭ್ರಮಿಸುವುದಕ್ಕಷ್ಟೇ ಮೀಸಲಾಗಬೇಕೆ? ಆಡಂಬರದ ಬದುಕು ನಮ್ಮದಾಗಬೇಕೆಂದು ಬಯಸಿದ್ದೇವೆಯೇ ವಿನಹ ನಮ್ಮ ಇಂದಿರುವ ಸುಖದ ಹಿಂದಿರುವ ಕಷ್ಟಗಳನ್ನು, ಹರಿಸಿದ ರಕ್ತದ ಹೊಳೆಯನ್ನು ನೆನಪಿಸುತ್ತಿಲ್ಲವಲ್ಲ?
ಭಾರತ ಸ್ವತಂತ್ರವಾಗಿದೆ ಎಂದುಕೊಂಡು ೬೪ ವರ್ಷಗಳು ಕಳೆದಿವೆ.... ಆದರೂ ಅಲ್ಲಿ ಇಲ್ಲಿ ಕಂಡುಬರುವ, ತಲೆಯೆತ್ತುವ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ದೊರಕೀತೆ? ಭರತಮಾತೆಯ ಒಡಲಾಳದ ಆರ್ತನಾದ ನಮ್ಮ ನಿಮ್ಮೆಲ್ಲರ ಕಿವಿಗಳಿಗೆ ನಾಟೀತೇ? ಆಕೆಗೆ ಮುಕ್ತಿ ಎಲ್ಲಿ? ಹೇಗೆ? ಮತ್ತು ಎಂದು? ಯೋಚಿಸಿ ಅತ್ತ ಹೆಜ್ಜೆ ಹಾಕೋಣವೇ? ಇವೆಲ್ಲವಕ್ಕೂ ಉತ್ತರ ಪರಿಹಾರಗಳು ಬೇಗನೆ ಸಿಗುವಂತಾದೀತೆ? ಹಾಗಾದಾಗ ಗಾಂಧೀಜಿಯವರ ಕನಸಿನ ಕಲ್ಪನೆಯ ರಾಜ್ಯದ ಸಾಕ್ಷಾತ್ಕಾರವಾದೀತು.. ಆ ದಿಕ್ಕಿನೆಡೆಗೆ ಸಾಗುವ ಮನೋಧರ್ಮ ನಮ್ಮೆಲ್ಲರದ್ದಾಗಲಿ.................