Thursday, December 15, 2011

ಬದಲಾವಣೆಗಳೊಂದಿಗೆ ಬದಲಾಗಬೇಕಾದ ಹೆಣ್ಣು

ಇಂದುಗಳು ನಾಳೆಗಳು ಹಿಂದೆ ಹಿಂದೋಡುವವು ತುದಿಮೊದಲ ಹೊಂದಿರದ ಅನಂತತೆಯಕಡೆಗೆ............ಇದು
"
ಕವಿವಾಣಿ, ಉರುಳುತ್ತಿರುವ ಕಾಲಚಕ್ರದ ಜೊತೆಗೆ ಜಾಗತಿಕಮಟ್ಟದಲ್ಲಿ ಆದ ವ್ಯತ್ಯಾಸಗಳೊಂದಿಗೆ ನಮ್ಮಲ್ಲಿನ ಎಲ್ಲಾ ವ್ಯವಸ್ಥೆಗಳೂ ಬದಲಾಗುತ್ತಿವೆ. ಇದು ಪ್ರಕೃತಿಸಹಜವಾದ ಪ್ರಕ್ರಿಯೆ ಎಂದರೂ ಅದರೊಂದಿಗೆ ಮಾನವರೂ ಅವರ ಆಲೋಚನೆಗಳೂ ಬಹಳಷ್ಟು ಮಟ್ಟಿಗೆ ಬದಲಾವಣೆಯನ್ನು ಕಂಡಿದೆ. ಇವೆಲ್ಲದರೊಂದಿಗೆ ನಾಲ್ಕು ಗೋಡೆಗಳ ನಡುವಿಗೇ ಸೀಮಿತವಾಗಿದ್ದ ಮಹಿಳೆಯ ಬದುಕೂ ಬೇರೆಬೇರೆ ಆಯಾಮಗಳಲ್ಲಿ ಅಭಿವೃದ್ದಿಯನ್ನು ಕಂಡಿದೆ ತನ್ನ ಬದುಕಿನ ಬೇಕು ಬೇಡಗಳನ್ನು ಸರಿಯಾದ ರೀತಿಯಲ್ಲಿ ತುಲನೆಮಾಡಬಲ್ಲ, ಸರಿತಪ್ಪುಗಳನ್ನು ವಿಮರ್ಶಿಸಬಲ್ಲ ಸಾಮರ್ಥ್ಯವನ್ನು ಆಕೆ ಬೆಳೆಸಿಕೊಂಡಿದ್ದಾಳೆ. ಒಂದುಕಾಲದಲ್ಲಿ ಇಡೀ ಕುಟುಂಬಕ್ಕೆ ಹೊರೆಯೆಂದೇ ನೋಡಲಾಗುತ್ತಿದ್ದ ಹೆಣ್ಣು, ಇಂದು ಇಡೀ ಕುಟುಂಬದ ಜವಾಬ್ಧಾರಿಯನ್ನು ಸಮರ್ಥವಾಗಿ ಹೊರಬಲ್ಲ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ ಎಂಬುದು ಗಮನಾರ್ಹ ಸಂಗತಿ.ಯತ್ರನಾರ್ಯಸ್ತು ಪೂಜ್ಯಂತೇ ರಮಂತೇ ತತ್ರದೇವತಃ" ಅಂದರೆ ಎಲ್ಲಿ ನಾರಿಯನ್ನು ಪೂಜ್ಯನೀಯ ಭಾವದಿಂದ ನೋಡುತ್ತಾರೋ, ಅಲ್ಲಿ ದೇವತೆಗಳ ಸಾಕ್ಷಾತ್ಕಾರವಿರುತ್ತದೆಯೆಂಬ ಆರ್ಯೋಕ್ತಿ, ಭಾರತದ ಸಂಸ್ಕೃತಿಯ ಪ್ರತೀಕ. ಭೂಮಿಯನ್ನು ಕೂಡಾ ಹೆಣ್ಣಿಗೆ ಹೋಲಿಸಲಾಗುತ್ತದೆ, ಎಂದ ಮೇಲೆ ಹೆಣ್ಣನ್ನು ಅದೆಷ್ಟು ಪೂಜ್ಯನೀಯ ಭಾವದಿಂದ ನೋಡುವ ಸಂಸ್ಕೃತಿ ನಮ್ಮದು ಎಂಬುವುದು ವೇದ್ಯವಾಗದಿರದು. ಅಂತೆಯೇ ಮನುಸ್ಮ್ರುತಿಯಲ್ಲಿ ಹೇಳಿದಹಾಗೆ ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಆಕೆ ಬಾಲ್ಯದಲ್ಲಿ ತಂದೆಯ, ಯವ್ವನದಲ್ಲಿ ಗಂಡನ, ವೃದ್ದಾಪ್ಯದಲ್ಲಿ ಮಕ್ಕಳ ಕೈಕೆಳಗೇ ಇರಬೇಕು, ಎಂಬಮಾತು ಒಂದರ್ಥದಲ್ಲಿ ಸ್ತ್ರೀಯ ರಕ್ಷಣೆಯ ದೃಷ್ಟಿಯಿಂದಲೇ ಎನ್ನಬಹುದಾದರೂ, ಇನ್ನೊಂದುಕಡೆ ಆಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವತಂತ್ರ ಎಂಬುದಾಗಿಯೂ ವಾದಗಳಿವೆ. ಪುರುಷ ಪ್ರಧಾನ ಸಮಾಜವೆಂದೇ ಕರೆಯಲ್ಪಡುವ ನಮ್ಮ ಸಮಾಜ ಸ್ತ್ರೀ ಸ್ವಾತಂತ್ರ್ಯವನ್ನು ಸುತಾರಾಂ ಒಪ್ಪಲಾರದು ಎಂಬುದು ಕಹಿ ಸತ್ಯ. ಮತ್ತೆ ಸ್ವಲ್ಪ ಹಿಂದಕ್ಕೆ ದೃಷ್ಟಿ ಹಾಯಿಸಿದರೆ ಜವಾಬ್ಧಾರಿಯ ದೃಷ್ಟಿಯಿಂದಲೋ, ವರದಕ್ಷಿಣೆ ಎಂಬ ಮಹಾಮಾರಿ ಪಿಡುಗಿನಿಂದಾಗಿಯೋ ಹೆಣ್ಣುಮಗು ಹುಟ್ಟಿದೆಯೆಂದರೆ ಮುಖ ಸಿಂಡರಿಸಿಕೊಂಡೋ, ಮುಖ ಸಪ್ಪಗೆ ಮಾಡಿಕೊಂಡೋ, ಹೆಣ್ಣು ಹೆತ್ತ ತಾಯಿಯನ್ನು ಹೀಗಳೆಯುತ್ತಲೋ ಹೋಗುವವರ ಸಂಖ್ಯೆಯೇ ಹೆಚ್ಚಾಗಿತ್ತು. ಗಂಡು ಹೆಣ್ಣಿನ ತಾರತಮ್ಯಕ್ಕೆ ಪಾರವೇ ಇರಲಿಲ್ಲ. ಇವನ್ನೆಲ್ಲ ಗಮನಿಸಿಯೇ ಇರಬೇಕು ಕವಯತ್ರಿ "ಸಂಚಿ ಹೊನ್ನಮ್ಮ" " ಹೆಣ್ಣುಹೆಣ್ಣೆಂದೇಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು" ಎಂದಿರುವುದು. ಇದಕ್ಕೆ ಹೋಲಿಕೆಯೆಂಬಂತೆ "ಹೆಣ್ಣಿನ ಮಾತು ಮೊಣಕಾಲಿಂದ ಕೆಳಗೆ" ಅನ್ನುವ ಗಾದೆಯೂ ಇದೆ. ಇವೆಲ್ಲವೂ ಹೆಣ್ಣಿನ ಅಸ್ಥಿತ್ವಕ್ಕೆ ಅದೆಷ್ಟು ಸವಾಲುಗಳಿದ್ದವು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುವ ವಿಚಾರಗಳು.ಹೆಣ್ಣು ಗಂಡಿನ ನಡುವಿನ ತಾರತಮ್ಯ ಅಂದಿನಂತೆ ಇಂದಿಗೂ ಇದೆ, ಆದರೆ ಹೋಲಿಸಿ ನೋಡಿದರೆ ಅಂದಿನ ಮತ್ತು ಇಂದಿನ ತರತಮತೆಗೆ ಅಜಗಜಾಂತರ ವ್ಯತ್ಯಾಸವಿದೆ. ಯಾವುದೇ ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಕೆಯನ್ನು ನಿರ್ಲಕ್ಷಿಸುತ್ತಿದ್ದ ಕಾಲ ಒಂದಾದರೆ, ಇಂದು ಆಕೆ ಇತ್ತ ಕಡೆಗೂ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಂಡಿದ್ದಾಳೆ. ಆರ್ಥಿಕ, ಸಾಮಾಜಿಕ, ರಾಜಕೀಯ, ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ, ಹೀಗೆ ಎಲ್ಲಾ ರಂಗಗಳಲ್ಲೂ ತನ್ನ ಇರವನ್ನು ಸಾಬೀತುಪಡಿಸುವುದರೊಂದಿಗೆ ತನ್ನ ಶಕ್ತಿಯನ್ನು ಪ್ರದರ್ಷಿಸಿದ್ದಾಳೆ. ಮನೆಯ ನಾಲ್ಕು ಗೋಡೆಗಳೊಳಗೆ ಬೆಚ್ಚನೆಯ ಹಾಸಿನೊಳಗೆ ಅವಿತಿದ್ದ ಹೆಣ್ಣು ದಿಟ್ಟತನದಿಂದ ಆಕಾಶದೆಡೆಗೆ ಲಗ್ಗೆ ಇಟ್ಟಿದ್ದಾಳೆ.ವಿದ್ಯಾಭ್ಯಾಸ ಕ್ಷೇತ್ರವನ್ನೊಮ್ಮೆ ಅವಲೋಕಿಸಿದರೆ ಅಲ್ಲೂ ಮುಂಚೂಣಿಯಲ್ಲಿರುವವರು ಹೆಣ್ಣು ಮಕ್ಕಳೇ ಆಗಿದ್ದು ನಾವೂ ಸಮರ್ಥರು ಎಂದು ಸಾಬೀತುಪಡಿಸಿಕೊಂಡಿದ್ದಾಳೆ. ಆರ್ಥಿಕ ಕ್ಷೇತ್ರದಲ್ಲಾದರೋ ಹೆಚ್ಚುಕಡಿಮೆ ೫೦% ಮಹಿಳೆಯರು ತಮ್ಮ ಪಾಲ್ಗೊಳ್ಳುವಿಕೆಯನ್ನು ತೋರಿಸಿಕೊಟ್ಟಿದ್ದಾರೆ. ರಾಜಕೀಯದಲ್ಲೂ ಹೆಚ್ಚುಕಡಿಮೆ ೧೦% ಪಾಲ್ಗೊಳ್ಳುವಿಕೆಯನ್ನು ಗಮನಿಸಬಹುದು. ವಿಜ್ಞಾನ,ಕ್ರೀಡೆಗಳಲ್ಲೂ ಸ್ತ್ರೀಯರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಯಾವುದೇ ಕ್ಷೇತ್ರದಲ್ಲೂ ಗಂಡಿಗಿಂತ ನಾವೇನು ಕಡಿಮೆ ಎಂಬುದಾಗಿ ಸವಾಲು ಹಾಕುವಷ್ಟರ ಮಟ್ಟಿಗೆ ಮುಂದುವರೆದಿದ್ದಾಳೆ ಎಂಬುದು ನಿಜಕ್ಕೂ ಗಮನಾರ್ಹ ಸಂಗತಿ.ಆದರೆ...... ಎಲ್ಲ ವಿಷಯಗಳೊಂದಿಗೆ ನಾವು ಗಮನಿಸಿಕೊಳ್ಳಬೇಕಾದ, ಕಾಳಜಿವಹಿಸಬೇಕಾದ ಕೆಲವು ಅಂಶಗಳನ್ನು ನಾವು ಮರೆತಿದ್ದೇವೆಯೇ? ಸ್ವಾತಂತ್ರ್ಯವನ್ನು ಪಡೆದುಕೊಳ್ಳುವ ನೆಪದಲ್ಲಿಯೋ ಅಥವಾ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸುವನೆಪದಲ್ಲೋ ನಾವು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯಬೇಕೇ? ಆರ್ಥಿಕ ಸ್ವಾತಂತ್ರ್ಯದಿಂದಾಗಿ ತನ್ನ ಜೀವನ ಸಂಗಾತಿಯನ್ನು ತಾನೇ ಆರಿಸಿಕೊಳ್ಳುವ ಸ್ವಾತಂತ್ರ್ಯ ಸ್ತ್ರೀಗೆ ಲಭಿಸಿದೆ, ಅಥವಾ ಆಕೆ ಪಡೆದುಕೊಂಡಿದ್ದಾಳೆ. ನಂತರದ ಜೀವನದ ಅಗತ್ಯತೆಗಳನ್ನು ಆಗುಹೋಗುಗಳನ್ನು ಆಲೋಚಿಸುವ ಸಾಮರ್ಥ್ಯ ಇದೆಯಾದರೂ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಹೆಣ್ಣುಸಹನಾಮಯಿ ಎಂಬುದಾಗಿ ಹೇಳಿದ್ದಕ್ಕೆ ಅಪವಾದವೇನೋ ಎಂಬ ಸಂಶಯ ಇಂದಿಗೆ ಕಾಡತೊಡಗಿದೆ. ಎಷ್ಟೋ ಕುಟುಂಬಗಳು ದಿಕ್ಕು ತಪ್ಪಲು, ಬೀದಿಪಾಲಾಗಲು ಹೆಣ್ಣೇ ಕಾರಣವಾಗಿದ್ದಾಳೆ. ಹಾಗೆಂದಮಾತ್ರಕ್ಕೆ ಒಬ್ಬ ಪುರುಷನ ಸರ್ವತೋಮುಖ ಬೆಳವಣಿಗೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂಬ ಮಾತೂ ಸುಳ್ಳಾಗಲಾರದು.ಎಷ್ಟೇ ಮುಂದುವರಿದರೂ ಸ್ವತಂತ್ರಳು ಎಂದೆನಿಸಿಕೊಂಡರೂ, ಪ್ರಕೃತಿದತ್ತವಾದ ದೈಹಿಕ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆ ಹೆಣ್ಣಿಗಿದೆ. ಯಾವುದೇ ರೀತಿಯಲ್ಲೇ ಆದರೂ ಆದ ಆಘಾತಗಳನ್ನು ತಡೆದುಕೊಳ್ಳಬಲ್ಲ ಸಾಮರ್ಥ್ಯ ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಆಕೆಗಿಲ್ಲ ಎಂಬುದು ಒಪ್ಪಿಕೊಳ್ಳಲೇಬೇಕಾದ ಕಠೋರ ಸತ್ಯ ಸಬಲೆ ಎಂಬುದಾಗಿ ಎಲ್ಲಾ ಆಯಾಮಗಳಲ್ಲೂ ಒಪ್ಪಿಕೊಂಡರೂ ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಯೋಚಿಸಿ ಮುಂದಡಿಯಿಡಬೇಕಾಗುತ್ತದೆ. ಹೀಗೆ ಯೋಚಿಸಹೊರಟಾಗ ಎದುರಾಗುವ ಪ್ರಶ್ನೆಯೆಂದರೆ ಹೆಣ್ಣು ಗಂಡಿನಂತೆ ಯಾವುದೇ ಸಮಯದಲ್ಲೂ ಹೊರಗಡೆ ಓಡಾಡಲು ಸಾಧ್ಯವಿದೆಯೇ? ಅಥವಾ ಓಡಾಡಹೊರಟ ಹೆಣ್ಣನ್ನು ಸಮಾಜ ಯಾವದೃಷ್ಟಿಯಿಂದ ನೋಡೀತು? ಸಂದರ್ಭದಲ್ಲಿ ನಾನು ಸಬಲೆ, ಏನುಬೇಕಾದರೂ ಮಾಡಬಹುದು ಎಂದುಕೊಂಡರಾದೀತೇ? ಎಲ್ಲಾಕ್ಷೇತ್ರಗಳಲ್ಲೂ ತನ್ನ ಪ್ರಾಬಲ್ಯವನ್ನು ಮೆರೆದ ಹೆಣ್ಣು ಮನೆ ಕೆಲಸಗಳನ್ನೂ ಸಮರ್ಥವಾಗಿ ನಿಭಾಯಿಸಬಲ್ಲಳು ಎಲ್ಲವೂ ಸತ್ಯವೇ, ಆದರೆ ನಾನು ಸಬಲೆಯೆಂಬ ಗರ್ವದಿಂದ ಅಹಂಭಾವದಿಂದ ಹೊಂದಾಣಿಕೆಯನ್ನು ಮರೆತರೆ? ಮುಂದೇನಾದೀತು ಎಂಬ ಆಲೋಚನೆಯೇ ಇಲ್ಲದೆ ಬದುಕನ್ನು ನೀರುಪಾಲು ಮಾಡಬೇಕಾದ ದಿನಗಳು ದೂರವಿರಲಿಕ್ಕಿಲ್ಲ. ಮನೆ,ಮನೆಯಲ್ಲಿರುವ ಹಿರಿಯರು, ಮನೆಮಕ್ಕಳು, ಎಲ್ಲರೂ ನಂಬಿದ ಸಹನಾಮಯಿ ಹೆಣ್ಣು - ಹೆಮ್ಮಾರಿಯಾದರೆ? ಊಹಿಸಲಸಾಧ್ಯವಾದಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸದಿರಲಾರದು.ಇವೆಲ್ಲವನ್ನೂ ಅವಲೋಕಿಸಿದಾಗ ನೆನಪಿಗೆ ಬರುವುದು ಇತ್ತೀಚಿನ ಸ್ತ್ರೀ ಸಬಲೀಕರಣದ ಕಲ್ಪನೆಯಲ್ಲಿರುವ ಉಡುಗೆ ತೊಡುಗೆಗಳು. ಒಬ್ಬವ್ಯಕ್ತಿಯ ಮನೋಧರ್ಮವನ್ನು ಅಳೆಯುವುದಕ್ಕೆ ಉಡುಗೆಯನ್ನು ಮಾನದಂಡವಾಗಿರಿಸಿಕೊಂಡರೆ ಅದು ಸರಿಯಲ್ಲ. ಸ್ತ್ರೀವಾದ ಎಂದೊಡನೆ ಮೈಗಂಟುವ ಅರೆಬಟ್ಟೆ ತೊಟ್ಟು ಗಂಡಸರ ವಿರುದ್ದ ವಾದಿಸುವುದು ಎಂಬಕಲ್ಪನೆ ಎಲ್ಲರ ಮನಸ್ಸಲ್ಲೂ ಬೇರೂರಿಬಿಟ್ಟಿದೆ. ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಅವರ ಉಡುಗೆ-ತೊಡುಗೆಗೂ ಯಾವುದೇ ಸಂಬಂಧವಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಸಂಧರ್ಭಕ್ಕನುಗುಣವಾದ ಉಡುಗೆಗಳನ್ನು ಬಳಸುವುದು ತಪ್ಪಲ್ಲ. ಗಡಿಬಿಡಿಯಲ್ಲಿ ಓಡುವ ಓಟಕ್ಕೆ ಸೀರೆ ಸರಿಬರುವುದಿಲ್ಲ, ಹಾಗೆಂದು ದೇವಾಲಯಗಳಿಗೆ ಭೇಟಿಕೊಡುವ ಸಂಧರ್ಭದಲ್ಲೋ, ಯಾವುದೇ ಸಮಾರಂಭಗಳಿಗೋ ಸೀರೆಯನ್ನು ಹೊರತುಪಡಿಸಿದ ಉಡುಗೆಗಳು ಸೇರಿಬರಲಾರದು. ಇದು ನಮ್ಮ ಸಂಸ್ಕೃತಿ, ಸಂಸ್ಕಾರ. ಮಹಿಳೆ ಆಧುನಿಕ ಚಿಂತನೆಗಳಿಗೆ ಒಗ್ಗಿಕೊಂಡಿದ್ದಾಳೆ, ಮುಂದುವರಿದಿದ್ದಾಳೆ, ಪ್ರಗತಿ ಪಥದಲ್ಲಿ ಸಾಗುತ್ತಿದ್ದಾಳೆ ಎಂದು ತೋರಿಸಿಕೊಳ್ಳುವುದಕ್ಕೆ, ಉಡುಗೆಗಳೇ ದಾರಿ ಖಂಡಿತವಾಗಿಯೂ ಅಲ್ಲ ಎಂಬುದನ್ನು ಅರಿತುಕೊಳ್ಳಲೇ ಬೇಕಾದ ಅನಿವಾರ್ಯ ಇಂದು ನಮ್ಮೆದುರಿಗಿದೆ. ನಮ್ಮ ನಮ್ಮ ಬದುಕಿನ ಒಳಿತು ಕೆಡುಕುಗಳಿಗೆ ನಾವೇಕಾರಣ ಎಂಬ ಕಠೋರ ಸತ್ಯವನ್ನು ಅರಿತು, ಬೇಕು ಬೇಡಗಳನ್ನು ಸರಿದೂಗಿಸಿಕೊಳ್ಳಬಲ್ಲ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ. ಅದೆಷ್ಟೋ ರೀತಿಯಲ್ಲಿ ದೌರ್ಜನ್ಯ ಅತ್ಯಾಚಾರ, ಅನಾಚಾರಗಳು ನಡೆಯುತ್ತವೆ ಎಂದರೆ ಅದರಲ್ಲಿ ಸಮಪಾಲು ಮಹಿಳೆಯರದ್ದೂ ಇದೆಯೆಂಬುದು ನಿಷ್ಟುರದ ಮಾತಾದರೂ ಸತ್ಯ. ನಮ್ಮ ನಡತೆಗಳೋ, ಉಡುಗೆ-ತೊಡುಗೆಗಳೋ ಎಲ್ಲವೂ ಕಾರಣವಾಗುತ್ತವೆ. ಏನೇನೋ ಕಲ್ಪನೆಗಳನ್ನು ಮಾಡಿಕೊಂಡು ಗಗನ ಕುಸುಮವನ್ನು ತನ್ನ ಕೈಯಲ್ಲಾಗಿಸುವ ಪ್ರಯತ್ನಕ್ಕೆ ಇಳಿದು ಬದುಕು ಬರಡಾಗಿರುವ ಘಟನೆಗಳು ಒಂದಲ್ಲ ಎರಡಲ್ಲ ಸಾವಿರಾರು. ಅಧಿಕಾರ ಅಂತಸ್ತು, ಅಹಂಕಾರವನ್ನು ತರಿಸದೇ ನಯವಿನಯಗಳನ್ನು ರೂಢಿಸಿಕೊಂಡು ಬದುಕನ್ನು ಹಸನಾಗಿಸಿ ನಮ್ಮೊಂದಿಗೆ ಇತರರನ್ನೂ ಉತ್ತಮರಾಗಿಸುವ ಹೊಣೆ ಹೆಣ್ಣಿಗಿದೆ.ಎಷ್ಟೇ ಅಭಿವೃದ್ಧಿ ಹೊಂದಿದರೂ, ಮುಂದುವರೆಯುತ್ತಿರುವ ಸಮಾಜದೊಂದಿಗೆ, ಓಡುವ ದಿನಗಳೊಂದಿಗೆ ನಾವೂ ರಭಸದಿಂದಲೇ ಓಡಬೇಕಾಗಿದೆ ನಿಜ. ಆದರೆ ಓಟದ ಭರದಲ್ಲಿ ನಮ್ಮತನ ನಮ್ಮ ಸಂಸ್ಕೃತಿ, ನಮ್ಮಸಂಸ್ಕಾರಗಳನ್ನು ಮರೆಯಬೇಕಾದ ಅಗತ್ಯವೇನೂ ಇಲ್ಲವಲ್ಲ! ಕಾಲದ ಕವಿಗಳ ಕಲ್ಪನೆಯ ಹೆಣ್ಣು ಈಕಾಲದಲ್ಲೂ ಇರಬಹುದಲ್ಲವೇ, ಆಧುನಿಕತೆಯಲ್ಲೂ ಹೆಣ್ತನವನ್ನು ಉಳಿಸಿಕೊಂಡೇ ಬೆಳೆಯಬಲ್ಲ, ಸವಾಲುಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದಲ್ಲವೇ? ನಿಟ್ಟಿನಲ್ಲಿ ಸ್ವಲ್ಪಯೋಚಿಸೋಣ..............                                  

Monday, December 5, 2011

ನಂಗಂತೂ ಪುರುಸೊತ್ತಿಲ್ಲ..........................

ನಂಗಂತೂ ಪುರುಸೊತ್ತಿಲ್ಲ..........................
ಇದು ಮಾಮೂಲಿ ಸಂಗತಿ. ಮನುಷ್ಯ ಅಂತ ಅನ್ನಿಸ್ಕೊಂಡವರಿಗೆ ಯಾರಿಗೂ ಪುರುಸೋತ್ತೇ ಇಲ್ಲ........ ಆದ್ರೆ ಕೆಲಸ ಏನಿದೆ ಅಂದ್ರೆ ಅದಂತೂ ಗೊತ್ತೇ ಇಲ್ಲ. ಏನೇ ಕೇಳಿ ಏನೇ ಹೇಳಿ ಒಂದೇ ಉತ್ತರ ಹೇಯ್ ನಾ ತುಂಬಾ ಬ್ಯುಝಿ...... ಟೈಮ್ ಅನ್ನೋದೇ ಇಲ್ಲ..... ಉಂಡಾಡಿ ಗುಂಡ ಅನ್ನಿಸ್ಕೊಂಡವನಿಗೂ ಟೈಮ್ ಇಲ್ಲ. ರಾಷ್ಟ್ರದ ಪ್ರಧಾನಮಂತ್ರಿಗೂ ಟೈಮ್ ಇಲ್ಲ.... ಅದೇನೇ ಕೆಲಸ ಹೇಳಿ ನೋಡಿ ಒಂದೇ ಮಾತು ನಂಗಂತೂ ಟೈಮ್ ಇಲ್ಲಪ್ಪ... ಫ಼ುಲ್ಲ್ ಬ್ಯುಝಿ......
  ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರಿಂದ ಬಂದ ಎಸ್ಎಮ್ಎಸ್ಸ್ ಓದಿ ನಾನು ಯಾವತ್ತಾದ್ರೂ ಬ್ಯುಝಿ ಅಂದಿದ್ದೆನೆನೋ ಅನ್ನಿಸ್ತು... ಯಾಕೆ ಅಂದ್ರೆ ಆ ಎಸ್ಸೆಮ್ಮೆಸ್ಸಿನ ತಾತ್ಪರ್ಯ " ಎಲ್ಲರಿಗೂ ಇರೋದು ೨೪ ಗಂಟೆಯೆ ಆಗಿರೋದ್ರಿಂದ ಸ್ವಾರ್ಥ ಮಾತ್ರ ನಮ್ಮನ್ನು ಬ್ಯುಝಿ ಅಂತ ಹೇಳಿಸುತ್ತದೆ" ಎಂಬುದಾಗಿತ್ತು..
 ಆಮೇಲೆ ಕುಳಿತು ಯೋಚಿಸುವಾಗ ನನಗೂ ಅದು ಅಹುದೆನಿಸಿತು... ನಮ್ಮ ಅಗತ್ಯಗಳಿಗೆ ಅರಿವಿಲ್ಲದೆಯೆ ಅದೆಷ್ಟೋ ಸಮಯವನ್ನು ವ್ಯಯಿಸುವುದಕ್ಕೆ ಸಿದ್ಧರಿರುವ ನಾವು ಇತರರಿಗೋಸ್ಕರ ಒಂದೇ ಒಂದು ನಿಮಿಷವನ್ನೂ ಕೊಡುವುದು ಸಾಧ್ಯವಿಲ್ಲ ಅನ್ನುವ ಮಟ್ಟದಲ್ಲಿ ಆಲೋಚಿಸುವವರು... ಇದು ಸ್ವಾರ್ಥ ಅಲ್ಲದೆ ಮತ್ತೇನು? ಮೊಬೈಲ್ ಹಿಡಿದು ಗಂಟೆಗಟ್ಟಲೆ ಪ್ರೇಮಿಸಿದವರೊಡನೆ ಹರಟುತ್ತಿದ್ದ ಹುಡುಗನಿಗೋ ಹುಡುಗಿಗೋ ಮದುವೆ ಆದ ಮೇಲೆ ಮನೆಯವರೊಡನೆ ಕಳೆಯುವುದಕ್ಕೆ ಸಮಯ ಸಿಗುವುದು ತುಂಬಾ ಕಡಿಮೆಯೇ.. ಗೆಳೆಯರೊಡನೆ ಊರೆಲ್ಲ ಅಲೆದಾಡುತ್ತಿದ್ದ ಪುಣ್ಯಾತ್ಮನಿಗೆ ತನ್ನ ಹೆಂಡತಿ ಹೊರಗಡೆ ಹೋಗೋಣ ಅಂದ್ರೆ ಟೈಮೇ ಇಲ್ಲ ಪಾಪ!!..
ನನಗೆ ಆಶ್ಚರ್ಯದ ಸಂಗತಿಯೆಂದರೆ ಭೂಮಿಯ ಮೇಲಿರುವ ಪ್ರತಿಯೊಬ್ಬನಿಗೂ ಇರುವುದು ಇಪ್ಪತ್ತನಾಲ್ಕೇ ಗಂಟೆ.... ಹೀಗಿದ್ದು ಕೆಲವರಿಗೆ ಮಾತ್ರ ಸಮಯ ಇಲ್ಲ..... ಶಾಲೆಗೆ ಹೋಗುವ ಮಕ್ಕಳಿಗೆ ಅದ್ಯಾಪಕರು ಹೇಳಿದ ಕೆಲಸ ಮಾಡಲು ಸಮಯ ಇಲ್ಲ, ವ್ಯಾಪಾರ ವ್ಯವಹಾರ ಮಾಡುವವರಿಗೆ ಟೈಂ ಇಲ್ಲ, ಮನೆಕೆಲಸ ಮಾಡುವ ಅಮ್ಮನಿಗಂತು ಟೈಂ ಅನ್ನೋದೇ ಇಲ್ಲ, ಆಫೀಸು ಕೆಲಸಕ್ಕೆ ಹೋಗುವ ಹೆಮ್ಮಕ್ಕಳಿಗೆ ಮನೆಕೆಲಸದೊಂದಿಗೆ ಉಳಿದಕೆಲಸಗಳನ್ನೂ ನಿಭಾಯಿಸುವರೇ ಟೈಂ ಇಲ್ಲ....ಮನೆಯಲ್ಲಿ ಮೊಮ್ಮಕ್ಕಳೊಂದಿಗೆ ಕಥೆ ಹೇಳುತ್ತಾ ಕಾಲ ಕಳೆಯುವ ಅಪ್ಪಮ್ಮ, ಅಪ್ಪಪ್ಪ, ಅಮ್ಮಮ್ಮ, ಅಮ್ಮಪ್ಪನವರಿಗೂ ( ಅಜ್ಜ, ಅಜ್ಜಿ) ಸಮಯವೇ ಸಿಗೋದಿಲ್ಲ........ ಹಾಗಂತ ಸಾಮಾನ್ಯ ಸಂಜೆ ಹೊತ್ತು ಮನೆಗಳ ಅಕ್ಕಪಕ್ಕ ಒಮ್ಮೆ ಕಣ್ಣು ಹಾಯಿಸಿದರೆ ಊರ ಪಟ್ಟಾಂಗ ಮಾಡುತ್ತಾ, ಹರಟುವವರ, ಅವರಿವರ ಸಂಗತಿಗಳಿಗೆ ಮೂಗು ತೂರಿಸುವ ಗೋಜಿಯಲ್ಲಿರುವವರಿಗೂ ಪಾಪ ಟೈಮ್ ಇಲ್ಲ ಸ್ವಾಮಿ.....!
ಇಲ್ಲದ ಟೈಂ ಜೊತೆಗೆ ಹೋರಾಟ ಮಾಡಿ ಸಾಧನೆಯನ್ನೇ ಬದುಕನ್ನಾಗಿಸಿದ ಜನರ ಪಟ್ಟಿಯನ್ನವಲೋಕಿಸಿದರೆ ಒಬ್ಬರೇ, ಇಬ್ಬರೇ.......... ಹಲವಾರು ಮಂದಿ.... ಅದೆಷ್ಟೋ ಕಾದಂಬರಿಗಳನ್ನು ಬರೆದ ಸಾಹಿತಿಗಳಿಗೆ, ಅದೇನೇನನ್ನೋ ಕಂಡು ಹಿಡಿದ ವಿಜ್ಞಾನಿಗಳಿಗೆ, ಅದೆಷ್ಟೋ ಹೋರಾಟ ಮಾಡಿದ ಸಮಾಜ ಸುಧಾರಕರೆಂದು ಕರೆಸಿಕೊಂಡವರಿಗೆ ಎಲ್ಲರಿಗೂ ಇದ್ದದ್ದು, ಇರುವುದು ಇಪ್ಪತ್ತ ನಾಲ್ಕೇ ಗಂಟೆ ಅಲ್ಲವೇ... ಸಮಯದ ಹೊಂದಿಸಿಕೊಳ್ಳುವಿಕೆ, ಸಮಯ ಪರಿಪಾಲನೆಯ ಮನಸ್ಸು, ಶ್ರದ್ಧೆ, ಭಕ್ತಿ ಇವೆಲ್ಲಾ ನಮ್ಮಲ್ಲಿದ್ದರೆ ಹೊಂದಿಸಿಕೊಂಡು ನಮಗಗತ್ಯವಾದ ಯಾವುದೇ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಸಾಧ್ಯ.... ಅಗತ್ಯ ಅನಗತ್ಯತೆ ಅನ್ನುವುದು ಅವರವರ ಭಾವಕ್ಕೆ ಬಿಟ್ಟದ್ದು........ ಅಯ್ಯೋ...ಈಗ ನೆನಪಾಯ್ತು ನೋಡಿ ನಾನೂ ತುಂಬಾ ಬ್ಯುಝಿ.......... ನಿಮ್ಮ ಜೊತೆ ಮಾತಾಡೋದಕ್ಕೆ  ನನಗೂ ಟೈಮ್ ಇಲ್ಲ ಸ್ವಾಮೀ................. ಏನಂತೀರಿ?!