Sunday, November 6, 2011

ವಸಂತ ಮೂಡುವುದೆಂದಿಗೆ...........................?

ವಸಂತ ಮೂಡುವುದೆಂದಿಗೆ..........................................?ವಸಂತ ಮೂಡುವುದೆಂದಿಗೆ........ ಈ ಜನ ಕೋಟಿಯ ಗೋಳು ಬಾಳಿಗೆ............. ಜಿ. ಎಸ್. ಶಿವರುದ್ರಪ್ಪ ಅವರ ಭಾವಗೀತೆ ಇದು..... ಈ ಹಾಡನ್ನು ಸಿ ಅಶ್ವಥ್ ಅವರ ಧ್ವನಿಯಲ್ಲಿ ಕೇಳ್ತಾ ಕೂತಿದ್ದೆ... ನಮ್ಮ ಜೀವನ ಅದೆಷ್ಟು ಸಮಸ್ಯೆಗಳೊಂದಿಗೆ ಸಾಗುತ್ತಿದೆ.... ಇವಕ್ಕೆಲ್ಲಿ ಕೊನೆ? ನಾವು ಮಾಡಿದ ತಪ್ಪಾದರೂ ಏನು? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಪ್ರಶ್ನೆಗಳು ಬಿರುಗಾಳಿಯಂತೆ ಎದ್ದು ಬಿಟ್ಟವು... ಹೀಗೆ ಮನಸ್ಸು ಎಲ್ಲೆಲ್ಲೋ ಓಡ್ತಾ ಇತ್ತು.. ಯಾವತ್ತೂ ಇಂತಹ ಪ್ರಶ್ನೆಗಳು ಕೊನೆಯಾಗೋದು ನಾವು ಮನುಷ್ಯರಾಗಿ ಹುಟ್ಟಿದ್ದೇ ತಪ್ಪಾ ಅನ್ನುವಲ್ಲಿ!?...... ನನ್ನ ಆಸಕ್ತಿಯ ವಿಷಯ ಸಮಾಜಶಾಸ್ತ್ರ ಆಗಿರುವುದಲೇ ಇರಬೇಕು ನನ್ನ ತಲೆಯೊಳಗೆ ಇಂತಹ ಪ್ರಶ್ನೆಗಳು ಸದಾ ಏಳುವುದು... ಏಳುತ್ತಲೇ ಇರುವುದು.... ಹೌದು, ತರಗತಿಯಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತಿದ್ದೆ. ಕೌಟುಂಬಿಕ ವಿಘಟನೆ, ಮಧ್ಯಪಾನ, ಅಮಲು ಸೇವನೆ, ಬಾಲಕಾರ್ಮಿಕರು, ವರದಕ್ಷಿಣೆ, ಭ್ರಷ್ಟಾಚಾರ, ಜನಸಂಖ್ಯಾ ಸ್ಫೋಟ, ನಿರುದ್ಯೋಗ, ಬಡತನ, ಬಾಲಾಪರಾಧ, ಕೊಲೆ, ಸುಲಿಗೆ, ಹೀಗೆ ಹತ್ತು ಹಲವು ಸಮಸ್ಯೆಗಳ ಪಟ್ಟಿ ಬೆಳೆದೇ ಹೋಯ್ತು. ಹಾಗಾದ್ರೆ ಈ ಸಮಸ್ಯೆಗಳಿಗೆ ಕಾರಣ ಏನಿರಬಹುದು ಅನ್ನುವಾಗ ಅದಕ್ಕೂ ಬೇರೆ ಬೇರೆ ಕಾರಣಗಳ ಪಟ್ಟಿ ಬೆಳೆಯುತ್ತಿದ್ದ ಹಾಗೇ ಬಂದ ಒಂದು ಉತ್ತರ ಕಾಲ ಕೆಟ್ಟು ಹೋಗಿದೆ...
ಯೋಚಿಸಲೇ ಬೇಕಾದ ಉತ್ತರ ಅಲ್ಲವೇ?.............!!!!!!! ಸ್ವಲ್ಪ ತಡೆದು ಕೇಳಿತು ಮನಸ್ಸು... ಕಾಲ ಕೆಟ್ಟಿದೆಯೇ? ನಾವು ಕೆಟ್ಟವರಾಗಿದ್ದೇವೆಯೇ? ಕಾಲ ಬದಲಾಗಿದೆಯೆ? ನಾವು ಬದಲಾದದ್ದೇ? ಯಾವುದು ಸರಿ, ಯಾವುದು ತಪ್ಪು? ಕಾಲ ಅಂದಿಗಿಂತ ಇಂದು ಹೇಗೆ ಭಿನ್ನ? ನಮ್ಮ ಜೀವನ ಶೈಲಿ, ಆಲೋಚನೆ, ಆಸಕ್ತಿ ಎಲ್ಲಾ ಬದಲಾಗಿದೆ ನಿಜ... ಈ ಬದಲಾವಣೆಗಳೊಂದಿಗೆ ನಾವು ಸ್ವಾರ್ಥಿಗಳಾಗುತ್ತಿದ್ದೇವೆ, ಬೇಕು ಬೇಡದ ದುಶ್ಚಟಗಳ ದಾಸರಾಗುತ್ತಿದ್ದೇವೆ, ಇಂದಿನ ಸುಖಕ್ಕಾಗಿ ನಾಳಿನ ಬದುಕನ್ನು ಮರೆಯುತ್ತಿದ್ದೇವೆ, ನಮ್ಮ ಸುಖದ ಬಗ್ಗೆ ಮಾತ್ರ ಯೋಚಿಸುತ್ತಿದ್ದೇವೆ, ಆದರೆ ನಮ್ಮ ಸುತ್ತ ನಮ್ಮ ಸುಖಕ್ಕಾಗಿ ಹೆಣೆದುಕೊಂಡ ಬಲೆಗೆ ನಮ್ಮೊಂದಿಗೆ ನಮ್ಮವರೆಲ್ಲಾ ಬಲಿಯಾಗುತ್ತಾರೆ ಎಂದೊಮ್ಮೆಯಾದರೂ ಆಲೋಚಿಸುತ್ತೇವೆಯೇ? ನಾವು ಮಾಡಿದ ಪಾಪ ಕರ್ಮದ ಫಲವನ್ನು ನಮ್ಮ ಮುಗ್ಧ ಮಕ್ಕಳು ಅನುಭವಿಸುವಂತಾದರೆ? ಮಾನವ ನಿರ್ಮಿತ ಸಮಸ್ಯೆಗಳೇ ಹೆಚ್ಚಿರುವಾಗ ವಿಧಿಯನ್ನು ಹಳ್ಲಿಯುವುದೆಷ್ಟು ಸೂಕ್ತ?
ಬರಗಾಲ, ನೆರೆ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿಗಳೇ ಮೊದಲಾದ ಸಮಸ್ಯೆಗಳೋ ಭೀಕರ ರೀತಿಯಲ್ಲಿ ಕಾಡುತ್ತಿವೆ... ಇದಕ್ಕೂ ಕಾರಣ ನಾವೇನೇ............????!!! ಹೌದೆಂದಾದರೂ ಅಲ್ಲವೆಂದು ಜಾರಿಕೊಳ್ಳುವುದು ಸುಲಭವಷ್ಟೆ?! ಅನಾಥರಾದವರೆಷ್ಟೋ, ಆಸ್ತಿಪಾಸ್ತಿ ಕಳಕೊಂಡವರೆಷ್ಟೋ, ಹಸಿವಿನಿಂದ ನರಳುವವರೆಷ್ಟೋ, ಕಳಕೊಂಡವರಿಗಾಗಿ ಹಂಬಲಿಸುವವರೆಷ್ಟೋ, ಕೊರಗುವವರೆಷ್ಟೋ, ಮನೆಮಠಗಳಿಲ್ಲದೆ ಪರದಾಡುವವರೆಷ್ಟೋ, ಹೇಗೆ ಮನುಷ್ಯ ತನ್ನ ಬದುಕನ್ನು ಸುಂದರವಾಗಿಸುವುದು? ಚಿಂತೆ, ಕೊರಗು, ದುಗುಡ, ದುಮ್ಮಾನ, ದುಃಖ, ಇಲ್ಲದ ಸಂತೃಪ್ತರು ಎಲ್ಲಾದರೂ ಇದ್ದರೆಯೇ ಎಂದರೆ ಸಾವಿಲ್ಲದ ಮನೆಯ ಸಾಸಿವೆಯ ತಾ ಅಂದಹಾಗಾಗುವುದಿಲ್ಲವೆ?
ಹ್ಮುಂ... ಅದೇ ಮತ್ತದೇ ಹಾಡು ಕಿವಿಯಲ್ಲಿ ಅನುರಣಿಸುತ್ತಿದೆ............. ವಸಂತ ಮೂಡುವುದೆಂದಿಗೆ........ ಈ ಜನ ಕೋಟಿಯ ಗೋಳು ಬಾಳಿಗೆ.............