Sunday, October 30, 2011

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........!?

ಕಾಯಬೇಕು... ಕಾಯಲೇಬೇಕು... ಕಾಯಬೇಕಷ್ಟೆ........?!  ಇಂದುಗಳು ನಾಳೆಗಳು ಹಿಂದೆ ಹೀಂದೋಡುವುವು ತುದಿ ಮೊದಲ ಕಾಣದನಂತತೆಯ ಕಡೆಗೆ.............ಕಾಲಚಕ್ರ ನಿರಂತರವಾಗಿ ಉರುಳುತ್ತಲೇ ಇರುತ್ತದೆ. ಓಡುವ ಕಾಲದೊಂದಿಗೆ ನಮಗರಿವಿಲ್ಲದೆಯೇ ಓಡುವ ಯಂತ್ರಗಳು ನಾವೂ ಆಗಿಬಿಟ್ಟಿದ್ದೇವೆ! ಬಾಳ ಕಡಲಲ್ಲಿ ಬಂದಪ್ಪಳಿಸುವ ತೆರೆಗಳಿಗೆ ಮೈಯೊಡ್ಡಿ, ಬಿರುಗಾಳಿ ಬರಸಿಡಿಲುಗಳಿಗೆ ಕೂಡಾ ವಿಚಲಿತರಾಗದ ಸ್ಥಿತಪ್ರಜ್ಞರಾಗಿ, ಹಳತುಗಳ ನೆನಪುಗಳೊಂದಿಗೆ ಹೊಸತುಗಳೆಡೆಗೆ ಅನಿವಾರ್ಯವೆಂಬಂತೆ ಧಾವಿಸುತ್ತಿದ್ದೇವೆ! ಮನೆ ಮನದ ತುಂಬೆಲ್ಲಾ ಹೊರಲಾರದಷ್ಟಿರುವ ಭಾರವನ್ನು ಹೊತ್ತುಕೊಂಡೂ ಸಮಾಜದ ಮುಂದೆ ನಗುವಿನ ಮುಖವಾಡದ ಸಂತೋಷಿಗಳಾಗಿದ್ದೇವೆ!? ಏನಿದೆ ಏನಿಲ್ಲ ಎಂಬುದಾಗಿ ಇತರರು ನಮ್ಮನ್ನು ಕಂಡು ಹಲುಬುವಷ್ಟು ಸುಖಿಗಳಾಗಿದ್ದೇವೆ! ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೆ ಜೀವನ ಎಂಬುದಾಗಿ ಕವಿಯೂ ಸ್ವಾನುಭವದಿಂದಲೇ ಹೇಳಿರಬಹುದಷ್ಟೇ!? ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದ ಹಿರಿಯರು, ಶಿವಶರಣರು, ದಾಸವರೇಣ್ಯರು ಕೂಡ ಬಹುಶಃ ಬದುಕಿದ್ದು ನಾಳಿನ ಬದುಕಿನ ಸುಂದರ ಕಲ್ಪನೆಯೊಂದಿಗೆ ಅಥವಾ ಹಗಲೋ ಇರುಳೋ ಅರಿತೋ ಅರಿಯದೆಯೋ ಕಂಡ ಕನಸುಗಳೊಂದಿಗೆಯೇ...........ಅಷ್ಟಕ್ಕೂ ಅವರೇನು ಅಲ್ಪತೃಪ್ತರಾಗಿರಬಹುದೇ?ಒಬ್ಬ ವ್ಯಕ್ತಿಯ ಬದುಕು ಹುಟ್ಟಿದಂದಿನಿಂದ ಸಾಯುವವರೆಗೂ ಸುಖಮಯವಾಗಿಯೇ ಇದ್ದೀತೆ? ಅಥವ ಇರಬೇಕೆಂದು ಬಯಸಿದರೆ ಅದು ಅತಿ ಆಸೆಯೋ ಸ್ವಾರ್ಥವೋ ಎಂದು ಕರೆಯಿಸಿಕೊಳ್ಳದೇನು?! ಹಾಗೆ ಹೇಳುವುದಾದರೆ ಸುಖ ಎಂಬುದನ್ನು ನಿರ್ಧಿಷ್ಟವಾಗಿ ವ್ಯಾಖ್ಯಾನಿಸುವುದಕ್ಕಾದೀತೇ? ಕಷ್ಟ ಸುಖ, ನೋವು ನಲಿವು, ಸಂತೋಷ ದುಃಖ, ಎಲ್ಲವೂ ಜೀವನದ ಅವಿಭಾಜ್ಯ ಅಂಗಗಳೆ... ಇವೆಲ್ಲವುಗಳ ಸಂಮಿಶ್ರ ಪಾಕದಲ್ಲೇ ಜೀವನದ ಸ್ವಾರಸ್ಯ ಅಡಗಿದೆ. ಕಷ್ಟದ ಅರಿವಾಗದ ವ್ಯಕ್ತಿಗೆ ಸುಖದ ಅನುಭವವಾಗುವುದಾದರೂ ಹೇಗೆ? ನೋವೇ ಗೊತ್ತಿಲ್ಲದವನಿಗೆ ನಲಿವಿನ ಅರಿವೆಲ್ಲಿಯ ಮಾತು!? ದುಃಖವೇ ಇಲ್ಲದೆ ಸಂತೋಷದ ಅರಿವಾಗುವುದಾದರೂ ಹೇಗೆ? ಕಹಿ ಎಂದರೇನೆಂದು ತಿಳಿದರೇ ತಾನೆ ಸಿಹಿಯನ್ನನುಭವಿಸುವುದು ಸಾಧ್ಯವಾಗುವುದು? ಕಳೆದುಕೊಂಡ ನಂತರವೇ ಅದರ ಬೆಲೆಯ ಅರಿವಾಗುವುದು............!? ಮೊನ್ನೆ ನನ್ನ ಆತ್ಮೀಯ ಸಹೋದ್ಯೋಗಿಯೊಬ್ಬರಲ್ಲಿ ಮಾತನಾಡುತ್ತಿದ್ದೆ
ಒಂದಂತು ಸತ್ಯ. ಮನುಷ್ಯ ಅಲ್ಪತೃಪ್ತನಂತೂ ಅಲ್ಲವೇ ಅಲ್ಲ. ಅಥವ ಹೌದೆಂದಾದರೆ ಆತ ಸಾಮಾನ್ಯ ಮನುಷ್ಯನೆನಿಸಿಕೊಳ್ಳಲಾರ. ಮಹಾತ್ಮನಾಗಿಬಿಡುತ್ತಾನೆ ಅಲ್ಲವೆ? ತಾಯಿ ತನ್ನ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಅಂಕ ಪಡೆದುಕೊಳ್ಳಬೇಕಂದುಕೊಳ್ಳುವುದು, ಸಹೋದ್ಯೋಗಿಗಳು ಎಲ್ಲರಿಗಿಂತ ಹೆಚ್ಚಾಗಿ ನಾವೇ ಗುರುತಿಸಿಕೊಳ್ಳಬೇಕಂದುಕೊಳ್ಳುವುದು, ಎಲ್ಲರಿಗಿಂತ ಸುಂದರಿಯಾಗಿ ನಾನೇ ಮೆರೆಯಬೇಕಂದುಕೊಳ್ಳುವುದು, ಎಲ್ಲರಿಗಿಂತ ಹೆಚ್ಚಿನ ಸಂಪತ್ತು ತಮ್ಮದಾಗಬೇಕೆಂದುಕೊಳ್ಳುವುದು, ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ಬಗೆಯಲ್ಲಿ ಪರಿತಪಿಸುವವರು ನಾವು...... ಕಡಿಮೆ ಅಂಕ ಬಂತೆಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಬಯಸಿದ ಹುಡುಗ ಅಥವಾ ಹುಡುಗಿ ಸಿಗಲಿಲ್ಲವಲ್ಲ ಎಂದುಕೊಂಡು ಸಾಯ ಹೊರಟದ್ದು, ಐಶಾರಾಮದ ಬದುಕಿನ ಕನಸು ಕಂಡು ಮಾಡಿದ ಸಾಲ ತೀರಿಸಲಾರದೆ ಮನನೊಂದು ಜೀವಕಳೆದುಕೊಳ್ಳುವ ನಿರ್ಧಾರ ಮಾಡಿದ್ದು, ಎಲ್ಲಾ ನಮ್ಮ ಕಣ್ಣಮುಂದಿರುವ ಸಾಕ್ಷಿಗಳು...... ಸಹನೆಯೇ ಇಲ್ಲದ ಬದುಕು ನಮ್ಮದಾಗಿ ಬಿಟ್ಟಿದೆ. ತಾಳ್ಮೆ ಇಲ್ಲದ ದಿನಗಳು ನಮ್ಮದಾಗುತ್ತಲಿವೆ. ಸ್ವಾರ್ಥಿಗಳಾಗಿ ಬದುಕುತ್ತಿದ್ದೇವೆ, ಮನುಷ್ಯ ಸಂಬಂಧ ಎತ್ತ ಸಾಗುತ್ತಲಿದೆ.... ಅಂದರೆ ದುಡ್ಡಿನತ್ತ... ಒಡವೆಗಳತ್ತ... ಇನ್ನೆತ್ತೆತ್ತಲೋ...... ನಮ್ಮ ದೃಷ್ಟಿ ಆಕಾಶದೆಡೆಗಿದೆಯೇ ಹೊರತು ಭೂಮಿಯೆಡೆಗಲ್ಲ...!
ಭಾವನೆಗಳಿಗೆ ಬೆಲೆಯೆಲ್ಲಿದೆ? ಇತರರ ಮೇಲೆ ದಬ್ಬಾಳಿಕೆ ಮಾಡಿ, ಇತರರಿಂದ ಕಸಿದುಕೊಂಡು, ಇತರರ ಭಾವನೆಗಳ ಮೇಲೆ ಕುದುರೆ ಸವಾರಿ ಮಾಡಿ ಕ್ರೂರಿ ಎನಿಸಿಕೊಳ್ಳುವುದಕ್ಕಿಂತ ಭಾವಜೀವಿಯಾಗಿ ಅಲ್ಪತೃಪ್ತರಾಗಿ ಸುಮ್ಮನಾಗಿ ಬಿಡುವುದೇ ಒಳಿತಲ್ಲವೆ?ಮಾನವ ಸಂಬಂಧಗಳಿಗೆ ಬೆಲೆ ಕೊಡುವ, ತನ್ನಂತೆ ಪರರ ಬಗೆವ, ಪರೋಪಕಾರಿ ಮನೋಧರ್ಮವನ್ನು ಬೆಳೆಸಿಕೊಳ್ಳುವ, ಎಲ್ಲರ ಕಷ್ಟ ಸುಖಗಳಲ್ಲಿ ಸ್ಪಂದಿಸುವ, ಸಮಾನ ಮನಸ್ಕರಾಗಿ ಹೊಂದಿಕೊಂಡು ಬಾಳುವ, ದಿನಗಳು ನಮ್ಮವಾದಾವೇ? ಬಂದೇ ಬರುತಾವ ಕಾಲ ಅಂತ ಹಾಡಿದ್ದಕ್ಕೆ ಸಾರ್ಥಕ ಅನ್ನುವ ಕಾಲ ....... ಬೇಗನೆ ಹತ್ತಿರವಾದೆತೇ? ..... ತಲ್ಲಣಿಸದಿರು ಕಂಡ್ಯ ತಾಳು ಮನವೇ....... ಕಾಯಬೇಕಷ್ಟೇ.....................!? ಏನಂತೀರಿ.................................
....... ಮಾತು ಮುಂದುವರಿದು ಕೊಂಕಣ ಸುತ್ತಿ ಮೈಲಾರಕ್ಕೆ ಬಂದರೂ ಕೊನೆಗೊಂಡದ್ದು ಅಲ್ಲೇ...... "ಎಲ್ಲ ನಿನ್ನ ಲೀಲೆ ತಾಯೆ ........ ಎಲ್ಲ ನಿನ್ನ ಮಾಯೆ" ಎನ್ನುವಲ್ಲೇ........... ಹೀಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಹರಟುವಾಗಲೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿಯ ಸಮಸ್ಯೆಗಳನ್ನೆ ಹೇಳುವುದುಂಟು. ಎಲ್ಲರೂ ಒಟ್ಟಾಗಿ ಪರಿಹಾರಗಳ ಬಗೆಗೂ ಆಲೋಚಿಸುವುದುಂಟು. ಎಲ್ಲಾ ಮುಗಿದು ನಂತರ ಮಾತುಗಳನ್ನು ಮೆಲುಕು ಹಾಕುವಾಗ ಹಲವಾರು ಪ್ರಶ್ನೆಗಳು ಕಾಡತೊಡಗುತ್ತವೆ. ಆ ಪ್ರಶ್ನೆಗಳೊಂದಿಗೆ ಹಿರಿಯರೊಬ್ಬರನ್ನು ಮಾತನಾಡಿಸಿದಾಗ "ಯಾವಾಗಲೂ ಪ್ರಶ್ನೆಗಳನ್ನೇ ಯೋಚಿಸಹೊರಟರೆ ಪ್ರಶ್ನೆ ಹಾಗೇ ಉಳಿದು ಬಿಡುತ್ತದೆ... ಬಂದದ್ದನ್ನು ಬಂದ ಹಾಗೆಯೆ ಎದುರಿಸಿಕೊಂಡು ಹೋದರಾಯಿತು ಬಿಡು" ಎಂದು ಸಮಾಧಾನ ಮಾಡುತ್ತಾರೆ. ಅನುಭವದ ಮತಾಗಿರುವುದರಿಂದ ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯ ಅಲ್ಲವೆ?

Thursday, October 27, 2011

ಬದುಕೇ ಏಕೆ ಕಾಡುವೆ ಹೀಗೆ

ಬದುಕೇ ಏಕೆ ಕಾಡುವೆ ಹೀಗೆ.........................................................................?ಹೌದಲ್ವಾ! ನಿಮಗೂ ಹೀಗೆ ಎಂದಾದರೂ ಅನಿಸಿದ್ದುಂಟಾ? ಪ್ರತಿ ಕ್ಷಣ, ಪ್ರತಿ ಗಂಟೆ, ವಾರ, ತಿಂಗಳು, ವರ್ಷ, ಹೀಗೇ ಎಷ್ಟೇ ಆಲೋಚಿಸಿದರೂ ಉತ್ತರವೇ ಸಿಗದ ಪ್ರಶ್ನೆ ಇದು ಅಂತ ನನ್ನ ಹಾಗೆ ಕೆಲವೋಮ್ಮೆಯಾದರೂ ನೀವೂ ತಲೆಕೆರೆದುಕೊಂಡಿರಬಹುದಲ್ವಾ!ಹುಂ!? ಅದು ಒಂದು ದಿನ ಎಸ್ಸೆಸ್ಸೆಲ್ಸಿ ಮುಗಿಯುವ ದಿನ ಅಥವಾ ಪಿಯುಸಿ ಮುಗಿಸಿ ಹೊರ ಹೋಗುವ ದಿನ, ಇನ್ನೂ ಹೇಳುವುದಾದರೆ ಡಿಗ್ರಿ ಮುಗಿಸಿ ಹೊರಬರುವಾಗ ಅಂತಾನಾದ್ರೂ ಇಟ್ಕೊಳ್ಳೋಣ. ಆಟೋಗ್ರಾಫ಼್ ನಲ್ಲಿ ಬಯಸಿದ ಬಯಕೆಗಳು ಬಳಿ ಬಂದು ಬಾಳು ಬಂಗಾರವಾಗಲಿ ಅಂತ ಪರಸ್ಪರ ಹಾರೈಸಿಕೊಂಡದ್ದು....... ಬಿಟ್ಟು ಬೇರಾಗ್ತೇವಲ್ಲಾ ಅಂತ ಅಪ್ಪಿಕೊಂಡು ಅತ್ತದ್ದು.... ಪ್ಲೀಸ್ ಸೆಂಡ್ ಮಿ ಯುವರ್ ವೆಡ್ಡಿಂಗ್ ಕಾರ್ಡು ಅಂತ ಕೇಳಿ ಕೊಂಡು ಸಂಭ್ರಮಿಸಿದ್ದು........ ಅದಕ್ಕೂ ಹಿಂದೆ ಅಕ್ಕ ತಂಗಿ ಅಣ್ಣ ತಮ್ಮ ಗೆಳೆಯ ಗೆಳತಿಯರ ಜೊತೆ ಆಡಿದ ಅಡುಗೆ ಆಟ, ಮದುವೆ ಆಟ, ಲಗೋರಿ ಆಟ, ಚೆನ್ನೆ ಮಣೆ ಆಟ, ಗೊತ್ತೇ ಇಲ್ಲದ ಆಂಗ್ಲ ಮಾಧ್ಯಮದ ಮಕ್ಕಳ ಆಟ ಅಥವ ಪೇಟೆ ಮಕ್ಕಳ ಆಟ ಎಂದೇ ಆ ಕಾಲದಲ್ಲಿ ಕರೆಸಿಕೊಂಡಿದ್ದ ಚೆಸ್ ಆಟ............... ಇನ್ನೂ ಏನೇನೋ ಆಟಗಳು...... ಬಾಲ್ಯದ ದಿನಗಳದೆಷ್ಟು ಮಧುರವಾದವು...... ಈಗ ಹಳೆಯ ನೆನಪುಗಳಷ್ಟೇ....!? ಆಗ ಅನಿಸಿದ್ದು ಬೇಗ ದೊಡ್ಡವರಾಗಿ ಬಿಟ್ಟರೆ ಓದುವ ಕಷ್ಟ ಇಲ್ಲ, ನಮಗೆ ಬೇಕಾದ ಹಾಗೆ ಖುಷಿಯಲ್ಲಿ ಇರಬಹುದಲ್ಲ ಅಂತ.... ದೂರದ ಬೆಟ್ಟ ನುಣ್ಣಗೆ ಅಂತ ಹಿರಿಯರು ಹೇಳಿದ್ದು ಇದನ್ನೇ ಅಂತ ಅರ್ಥ ಆಗೋದು ಮಾತ್ರ ತಡವಾಗಿ ಅಷ್ಟೇ.....ಓದು ಪರೀಕ್ಷೆ ಹತ್ತಿರ ಬರ್ತಿದೆ ಅನ್ನುವ ಅಮ್ಮನ ಎಚ್ಚರಿಕೆಯ ನುಡಿ ಕಿವಿಗೆ ಕರ್ಕಶವಾಗಿಯೇ ಕೇಳಿದ್ದು........ ಅಪ್ಪನ ಹೆದರಿಕೆಗೆ ಪಠ್ಯ ಪುಸ್ತಕದ ಎಡೆಯಲ್ಲಿಟ್ಟು ಓದುತ್ತಿದ್ದುದು ಆ ವಯಸ್ಸಿಗೆ ಇಷ್ಟವಾಗುತ್ತಿದ್ದ ಸಾಯಿಸುತೆಯ ಅದೆಷ್ಟೋ ಕಾದಂಬರಿಗಳನ್ನು..... ಪರೀಕ್ಷೆಯ ಮೊದಲಿನ ದಿನದವರೆಗೂ ಓದು ಅಂದ ಕೂಡಲೇ ಓದಿದ್ದು ಓದುತ್ತಿದ್ದದ್ದು ಕಾದಂಬರಿ ಪುಸ್ತಕಗಳನ್ನಷ್ಟೇ.. ಹೊರತು ಪಾಠ ಪುಸ್ತಕಗಳನ್ನಲ್ಲ..... ಅಮ್ಮ ಮನೆಕೆಲಸ ಕಲಿ ಎಂದಾಗ ಬೇಕಾದಾಗ ಮಾಡಿದರಾಯ್ತು ಬಿಡು....ಎಂದು ಚೀರಿ ಜಾಗದಿಂದ ಕಾಲ್ಕಿತ್ತದ್ದು... ಎಲ್ಲವೂ ಸದಾ ಕಾಡುವ ನೆನಪುಗಳು........!ವಾಸ್ತವದಲ್ಲಿ ಗಳಿಸುವ ಸ್ವಾತಂತ್ರ್ಯ ನಮ್ಮದು....... ವ್ಯಯಿಸುವುದಕ್ಕೆ ಹಲವರ ಅಪ್ಪಣೆ ಬೇಕು...... ನನ್ನ ಜವಾಬ್ದಾರಿಗಳೇನು ಅನ್ನುವುದಕ್ಕಿಂತ ನಿನ್ನ ಜವಾಬ್ದಾರಿಗಳ ಪಟ್ಟಿ ಹನುಮಂತನ ಬಾಲ........... ನಾನೇನು ಅನ್ನುವುದಕ್ಕಿಂತ ನಿನ್ನನ್ನೆಚ್ಚರಿಸುವುದಕ್ಕೇ ಇರುವವರ ಸಾಲು..... ಎಲ್ಲಾ ಸಂದರ್ಭಗಳಲ್ಲೂ ನೆನಪಾಗುವುದು.... ತಾಳುವಿಕೆಗಿಂತನ್ಯ ತಪವು ಇಲ್ಲ............ ದಾಸ ವಾಣಿ ಅದೆಷ್ಟು ಅರ್ಥಪೂರ್ಣ........... ಆದರೆ ಅದ್ಯಾರಿಗೆ ಅನ್ವಯ ಅನ್ನುವುದು ಚಿಂತಿಸಲೇಬೇಕಾದ ಸಂಗತಿ........
ಬದುಕು ನಾವಂದುಕೊಂಡಂತಿರುವುದಿಲ್ಲ.. ವಾಸ್ತವಕ್ಕೆ ಬಂದು ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಆ ದಿನಗಲೇ ಒಳ್ಳೆಯದಿತ್ತು ಅನ್ನಿಸದಿರದು....... ಬಯಸಿದ್ದು ಸಿಗುವುದೂ ದೂರದ ಮಾತು........ ಆಸೆಗಳ ಲೋಕದಲಿ ಕಥೆಗಳ ಬರೆವಂಥ.......... ಅನ್ನುವ ಚಿತ್ರ ಗೀತೆ ಪದೇ ಪದೆ ನೆನಪಾಗುತ್ತದೆ........ ಅದೇ ಮತ್ತೆ ಮತ್ತೆ ನಮ್ಮನ್ನು ಹಿಂದಕ್ಕೂ ಕರೆದೊಯ್ಯುತ್ತದೆ.......ಹೇಗೆ ಅಂತೀರಾ? ನಾನು ೭ ನೆಯ ತರಗತಿಯಲ್ಲಿ ಓದಿದ, ಕನ್ನಡ ಕಲ್ಸಿದ ಗುರುವಿಗೆ ಬಯ್ದುಕೊಂಡಾದರೂ ಕಂಠಪಾಠ ಮಾಡಿದ ....... ವನಸುಮದೊಳೆನ್ನ ಜೀವನವು ವಿಕಸಿಸುವಂತೆ ಮನವನನುಗೊಳಿಸು ಗುರುವೇ ಹೇ ದೇವ ........ ಏನಂತೀರಿ

Wednesday, October 19, 2011

ಓಹ್! ಕನಸೇ ವಿಚಿತ್ರ

ಓಹ್! ಕನಸೇ ವಿಚಿತ್ರ ...........ಹೌದು...... ಅದಕ್ಕೇ ಇರಬೇಕು ಕವಿ ಹೇಳಿದ್ದು ಕನಸುಗಳ ಮಾತು ಮಧುರ ಅಂತ.... ಈ ಕನಸುಗಳೇ ಹೀಗೆ..... ಮತ್ತೆ ಮತ್ತೆ ನೆನಪಾಗಿ, ಕೆಲವೊಮ್ಮೆ ನಗಿಸಿ, ಕೆಲವೊಮ್ಮೆ ಅಳಿಸಿ, ಕೆಲವೊಮ್ಮೆ ಸಿಟ್ಟು ತರಿಸಿ, ಕೆಲವೊಮ್ಮೆ ಮೌನವಾಗಿಸಿ, ಮತ್ತೆ ಕೆಲವೊಮ್ಮೆ ಬೊಬ್ಬಿಡುವಂತೆ ಮಾಡಿಬಿಡುತ್ತದೆ. ಈ ಅನುಭವ ಬಹುಶಃ ನನ್ನದು ಮಾತ್ರ ಅಲ್ಲ. ನಿಮ್ಮದೂ ಕೂಡಾ ಅಲ್ವಾ? ಹಾಂ, ಅಂದ ಹಾಗೆ ಕನಸು ಕಾಣುವವರಲ್ಲಿ ಬೇರೆ ಬೇರೆ ವಿಧದವರಿದ್ದಾರೆ ಅಂತ ಭಾವಿಸಿದ್ದೇನೆ. ಹಾಗೆಯೇ ಕನಸಿನಲ್ಲೂ ಬೇರೆ ಬೇರೆ ವಿಧಗಳಿವೆ ಅನ್ನುವುದೂ ಸತ್ಯವೇ ಬಿಡಿ. ಕೆಲವರು ನಿದ್ದೆಯಲ್ಲಿ ಕನಸು ಕಂಡರೆ ಇನ್ನು ಕೆಲವರು ಬಸ್ ಸ್ಟ್ಯಾಂಡ್ ನಲ್ಲಿ, ತರಗತಿಗಳಲ್ಲಿ ಅಧ್ಯಾಪಕರು ಪಾಠ ಮಾಡುವಾಗ, ಕಚೇರಿಗಳಲ್ಲಿ ಕೆಲಸ ಮಾಡುವಾಗ, ಹೀಗೆ ಹಲವಾರು ಸಂದರ್ಭಗಳಲ್ಲಿ ಕನಸು ಕಾಣುವವರಿದ್ದಾರೆ. ಹಾಗೆಂದ ಮಾತ್ರಕ್ಕೆ ಕನ್ಸು ಕಾಣುವುದಕ್ಕೆ ನಿರ್ಧಿಷ್ಟ ಸ್ಥಳದ ಅಗತ್ಯ ಇದೆ ಎಂಬುದು ನನ್ನ ವಾದವಲ್ಲ. ಇನ್ನೊದು ರೀತಿಯಲ್ಲಿ ನೋಡಿದರೆ ಭವಿಷ್ಯದ ಬಗೆಗೆ ಕನಸು ಕಾಣದೇ ಇದ್ದರೆ ಮನುಷ್ಯ ಏನನ್ನೂ ಸಾಧಿಸುತ್ತಿರಲಿಲ್ಲ ಅಲ್ಲವೇ?ಯಾವನೋ ಒಬ್ಬ ಹೀರೋ ಸಿನಿಮಾದಲ್ಲಿ ಹತ್ತು ಜನರನ್ನು ಒಮ್ಮೆಲೇ ಹೊಡೆದುರುಳಿಸಿ ಬಿಟ್ಟದ್ದನ್ನು ಕಂಡು ನಾನು ಅವನಂತೆಯೇ ಮಾಡಬೇಕೆಂದು ಕನಸು ಕಾಣುವುದು, ಯಾವಳೋ ಒಬ್ಬ ನಟಿ ತುಂಡು ಬಟ್ಟೆ ಉಟ್ಟು ಹೀರೋ ಜೊತೆ ಕುಣಿಯುತ್ತಿದ್ದರೆ ಅದನ್ನೇ ವಾಸ್ತವ ಎಂದುಕೊಂಡು ನಾನೂ ಅವಳಂತಾಗುವ ಕನಸು ಕಾಣುವುದು, ಬಾರ್, ಪಬ್ ಗಳಲ್ಲಿ ಗೆಳೆಯರ ಜೊತೆ ಮಜಾ ಮಾಡುವ ಕನಸು ಕಾಣುವುದು, ಚೆಂದದ ಹುಡುಗಿ ಎಲ್ಲೋ ಹೋಗುತ್ತಿದ್ದರೆ ಆಕೆಯನ್ನು ತನ್ನವಳನ್ನಾಗಿಸಿಕೊಳ್ಳುವ ಕನಸು, ಹೀಗೆ ಇತ್ತೀಚಿನ ಕನಸುಗಳಿಗೆ ಅರ್ಥವೇ ಇಲ್ಲ ಎನಿಸಿಬಿಟ್ಟಿದೆ. ಆದರ್ಶ ಪುರುಷರ ಜೀವನ ಕಥೆಗಳನ್ನವಲೋಕಿಸಿ ನಾವೂ ಅವರಂತಾಗೋಣ ಅನ್ನುವ ಕನಸು ಕಾಣುವವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದೀತು..... ಇದು ಆಧುನಿಕತೆ! ?ಪ್ರತಿಯೊಂದಕ್ಕೂ ಆಧುನೀಕರಣ, ಪಾಶ್ಚಾತ್ಯೀಕರಣ, ನಗರೀಕರಣ ಅನ್ನುವ ಹಣೆಪಟ್ಟಿ ಕಟ್ಟುತ್ತೇವಲ್ಲ? ಅದಕ್ಕಿಂತ ಮೊದಲು ನಾವೇನು ಎಂಬುದನ್ನು ಆಲೋಚಿಸಿದ್ದೇವೆಯೆ? ಇವೆಲ್ಲವುಗಳಿದ್ದಾಗ್ಯು ನಾವಾರಿಸಿಕೊಂಡ ಬದುಕು ನಮಗೆ ಸಿಗುವುದು ಕಷ್ಟವಾದರೂ ಮನಸ್ಸು ಮಾಡಿದರೆ ಸಾಧ್ಯವಿಲ್ಲವೇ? ಪಬ್ಬು, ಬಾರು, ಇಸ್ಪೀಟು, ಸಿಗರೇಟು, ದಂಧೆಗಳೇ ಮೊದಲಾದುವುಗಳಿಂದ ಅಥವಾ ದೇಹದ ಏರುತಗ್ಗುಗಳೆಲ್ಲವನ್ನೂ ತೆರೆದಿಡುವಂತಹ ಉಡುಪಿನಿಂದ ಅಥವಾ ಇನ್ನೂ ಹೇಳಿಕೊಳ್ಳಲಾಗದಂತಹ ವರ್ತನೆಗಳಿಂದ ಮಾತ್ರ ಆಧುನೀಕತೆಯನ್ನು ಪ್ರತಿಬಿಂಬಿಸುವುದು ಸಾಧ್ಯವೆ?! ಇಂತಹ ಕನಸುಗಳನ್ನು ಸುಸಂಸ್ಕ್ರ‍ತ ರಾಷ್ಟ್ರ ಎನಿಸಿಕೊಂಡಿರುವ ಭಾರತಾಂಬೆಯ ಮಕ್ಕಳಾಗಿ ನಾವು ಕಾಣಬೇಕೆ?ಅಂದಿನ ಕವಿಗಳು ಕಂಡ ಹಾಗೆ, ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾವಾಗುವ ಹಾಗೆ, ಹಸುವಿನ ಕೊರಳ ಗೆಜ್ಜೆಯ ಧ್ವನಿ ಆಗುವ ಕನಸು, ನಮಗೇಕೆ ಕಾಣುವುದಿಲ್ಲ?ಯಾರದ್ದೋ ಪರ್ಸಿಗೆ ಕನ್ನ ಹಾಕಿ, ನಾನು ಶ್ರೀಮಂತನಾಗಿ ಮೆರೆಯಬೇಕು ಅನ್ನುವ ಕನಸು ಕಾಣುವುದಕ್ಕಿಂತ ಇದೆಷ್ಟೋ ವಾಸಿ ಅಲ್ಲವೇ? ಹಾಗೆಂದು ಕನಸು ಕಾಣುವುದೇ ತಪ್ಪೇ? ಖಂಡಿತಾ ಅಲ್ಲ............. ಇಂದು ಕಂಡ ಕನಸೇ ನಾಳಿನ ಭವಿಷ್ಯವನ್ನು ನಿರ್ಧರಿಸುವ ತೀರ್ಮಾನವೂ ಆಗಿರಬಹುದು. ಅದು ಆರೋಗ್ಯಕರವಾದ ಕನಸು ಕಂಡಾಗ ಮಾತ್ರ ಸಾಧ್ಯ. ಬದುಕಿನ ಒಳಿತು ಕೆಡುಕುಗಳನ್ನು ಸರಿದೂಗಿಸಿಕೊಂಡು ಬಾಳನ್ನು ಬದುಕಾಗಿಸುವ ಕನಸು ಅದು ಇರುಳು ಕಂಡದ್ದಾಗಿರಲಿ ಹಗಲು ಕಂಡದ್ದೇ ಇರಲಿ... ಉತ್ತಮ ಭವಿಷ್ಯ ನಿರ್ಮಾಣಕ್ಕೆ ದಾರಿಯಾಗಲಿ. ಕಂಡ ಕನಸುಗಳ ಕೈಗೂಡಿಸಿಕೊಳ್ಳುವ ಕಾರ್ಯಗಳಲ್ಲಿ ಕುಂದುಂಟಾಗದಿರಲಿ....... ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು, ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ ತಂಗಳವೇ ಲೇಸು ಅನ್ನುವ ಸರ್ವಜ್ಞನ ಮಾತು ಸದಾ ಗಮನದಲ್ಲಿಟ್ಟುಕೊಳ್ಳೋಣ ಅಲ್ಲವೇ....................................................

 





Sunday, October 9, 2011

ಎಲ್ಲಿಂದಲೋ ಎಲ್ಲಿಗೋ.................................

ಹುಂ, ಇದೇನಿದು...........
ಇದು ಜೀವನ............ ಹುಟ್ಟು ಸಾವಿನ ಮಧ್ಯದ ದಿನಗಳು ......................
ಬೇಡದ ಬೇಕುಗಳನ್ನು ನಮ್ಮದಾಗಿಸಿ, ಎದ್ದ, ಅಪ್ಪಳಿಸಿದ ಅಲೆಗಳನ್ನು ಮೀರಿ ಮಾಡುವ ಹೋರಾಟ..............
ಸಿಹಿ ಕಹಿ ಜೊತೆಗೊಂದಿಷ್ಟು ಉಪ್ಪು ಹುಳಿ ಖಾರ..........................
ಎಲ್ಲೋ ಹುಟ್ಟಿ ಅದೆಲ್ಲೋ ಬೆಳೆದು ಅದೆಲ್ಲೋ ಸೇರಿ ಇನ್ನೂ ಎನೇನೋ ಆಗುವ ಪ್ರಯತ್ನದೊಂದಿಗೆ ಗೆಲುವಲ್ಲಿ ಹಿಗ್ಗಿ ಸೋಲಲ್ಲಿ ಕುಗ್ಗಿ.............
ಸಂತಸ ದುಃಖಗಳನ್ನು ಹೊಂದಿಸಿ ಸಮಾಜದಲ್ಲಿ ನಗುವಿನ ಸೋಗು ಹಾಕಿ..............................
ಪ್ರಯಾಣದಲ್ಲಿ ಸಿಗುವ ನಿಲ್ದಾಣಗಳಲ್ಲಿ ಬಸ್ಸು ನಿಂತಂತೆ ಸ್ವಲ್ಪ ಅಲ್ಲಿ ಸ್ವಲ್ಪ ಇಲ್ಲಿ ನಿಂತು ಕೂತು ಎದ್ದು ಬಿದ್ದು........
ಓಡುವ ಓಟ........ ಕಾಡುವ ಕಾಟ..........ಹುಡುಕಾಟ.... ಅವುಗಳೊಂದಿಗೆ ಕಂಡ ಕನಸುಗಳನ್ನು ನನಸಾಗಿಸುವ ಪರದಾಟ....
ಹೀಗಿರುವ ದಿನಗಳ ಮಧ್ಯದಲ್ಲಿ ನೋಡುವ, ಕೇಳುವ, ಮಾಡುವ ವಿಷಯಗಳ ಚರ್ಚೆ, ವಿಮರ್ಶೆ..........
ಎಲ್ಲಾ ಲಘು, ಘನ ವಾಸ್ತವಿಕ ವಿಷಯಗಳ ಸಂಕಲನ.............
ಮನಸ್ಸಿನ ಮಿಡಿತ ಹಾಗೂ ತುಡಿತ...................... ಅಷ್ಟೇ............!!!!!!!!!!!!!!!!!!!!!!!!!

Saturday, October 8, 2011

ಯಾವತ್ತೋ ಕಂಡ ಕನಸು ಈಗ ಸಾಕಾರಗೊಳ್ಳುವತ್ತ ಹೆಜ್ಜೆ ಇಡುತ್ತಿದೆ............ ನಿಮ್ಮ ಮನಸ್ಸಿನ ಮಾತಾಗಿ ನಿಮ್ಮ ಭಾವನೆಗಳಿಗೆ ಜೊತೆಯಾಗಿ ಸದಾ ನಿಮ್ಮೊಂದಿಗಿರುವ ಆಶಯ ನಮ್ಮದು.............. ನಮ್ಮ ಜೊತೆ ನೀವೂ ಇರ್ತೀರಲ್ವಾ?